ಅಂತೂ ಇಂತೂ ಸಂತೆಕಟ್ಟೆ, ಜಂಕ್ಷನ್ ನಲ್ಲಿ “ವೆಯ್ಕುಲರ್ ಓವರ್ ಪಾಸ್” ಕಾಮಗಾರಿ ಪ್ರಾರಂಭ
![](https://haikaravali.com/wp-content/uploads/2023/01/IMG_20230102_221353.jpg)
ಉಡುಪಿ: ಉಡುಪಿಯಿಂದ ಕುಂದಾಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಸಂತೆಕಟ್ಟೆ ಜಂಕ್ಷನ್ ನಲ್ಲಿ ರಸ್ತ ಅಗಲೀಕರಣದ ನಂತರ ಅಪಘಾತಗಳು ಜಾಸ್ತಿಯಾಗಿ, ತುಂಬಾ ಜನರ ಸಾವು ನೋವು ಸಂಭವಿಸುತ್ತಿತ್ತು. ಸುತ್ತಮುತ್ತಲಿನ ಭಾಗದ ಎಲ್ಲಾ ಗ್ರಾಮಸ್ಥರು ತಾಲೂಕು ಆಡಳಿತ, ಜಿಲ್ಲಾ ಆಡಳಿತ, ನಗರ ಸಭೆ, ಶಾಸಕರು, ಲೋಕಸಭಾ ಸದಸ್ಯರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ನೀಡಿದರೂ ಏನು ಉಪಯೋಗವಾಗಿರಲಿಲ್ಲ. ಅನೇಕ ಸಾವು ನೋವುಗಳ ನಂತರ ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಣ್ತೆರೆದು ಸಂತೆಕಟ್ಟೆ ಜಂಕ್ಷನ್ ನಲ್ಲಿ “ವೆಯ್ಕುಲರ್ ಓವರ್ ಪಾಸ್” ನಿರ್ಮಾಣಕ್ಕೆ ಇಂದು ಕಾರ್ಯಾರಂಭ ಮಾಡಿದೆ. ಸುಮಾರು ಒಂದು ವರ್ಷಗಳ ಕಾಲ ಈ ಕಾಮಗಾರಿಯು ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಕುಂದಾಪುರ ಫ್ಲೈ ಓವರ್ ಹಾಗೂ ಮಂಗಳೂರಿನ ಪಂಪ್ ವೆಲ್ ಫ್ಲೈ ಓವರ್ ನಂತೆ ಎಷ್ಟು ವರ್ಷಗಳು ಬೇಕಾಗುತ್ತೋ ಗೊತ್ತಿಲ್ಲ. ಒಂದು ವರ್ಷಗಳ ಕಾಲ ನಡೆಯಲಿರುವ ಈ ಕಾಮಗಾರಿಗೆ ಆ ಭಾಗದಲ್ಲಿ ಸಂಚರಿಸುವಂತಹ ವಾಹನ ಸಂಚಾಲಕರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕುಂದಾಪುರದಿಂದ ಕಲ್ಯಾಣಪುರ ಮತ್ತು ಕೆಮ್ಮಣ್ಣು, ಹೂಡೆ ಭಾಗಗಳಿಗೆ ಹೋಗುವಂಥ ವಾಹನ ಚಾಲಕರು ತಾತ್ಕಾಲಿಕವಾಗಿ ಸಂತೆಕಟ್ಟೆಯಲ್ಲಿ ಬಲ ಭಾಗಕ್ಕೆ ತಿರುಗಿ ಹೋಗಬಹುದು. ಆದರೆ ಕಾಮಗಾರಿಯು ಹತ್ತಿರ ಬರುತ್ತಿದ್ದಂತೆ ರೋಬೋ ಸಾಫ್ಟ್ ವೇರ್ ಹತ್ತಿರ ಯು ಟರ್ನ್ ಮಾಡಿಕೊಂಡು ಬರಬೇಕಾಗಬಹುದು. ಈಗ ಮಲ್ಪೆ, ಮಲ್ಪೆ ರಸ್ತೆಯ ಸುತ್ತಮುತ್ತ ಮತ್ತು ಸಂತೆಕಟ್ಟೆಯ ಸುತ್ತಮುತ್ತ ಹೋಗಬೇಕಾದವರು ರೋಬೋ ಸಾಫ್ಟ್ ವೇರ್ ತನಕ ಹೋಗಿ “ಯು ಟರ್ನ್” ಮಾಡಿಕೊಂಡು ಬರಬೇಕಾಗಿದೆ. ಇಂದು ಹಿರಿಯ ಪೊಲೀಸ್ ಅಧಿಕಾರಿಗಳು ಸಂತೆಕಟ್ಟೆಯ ಜಂಕ್ಷನ್ ನಲ್ಲಿ ಸಂಚಾರ ದಟ್ಟಣೆ ಮತ್ತು ಸಮಸ್ಯೆಗಳನ್ನು ನಿವಾರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಾಹನ ಸಂಚಾರದ ಸಮಸ್ಯೆಗಳನ್ನು ಪರಿಹರಿಸಲು ಇದೇ ಜಂಕ್ಷನ್ ಹತ್ತಿರ ಈ ಹಿಂದೆ ನಡೆಯುತ್ತಿದ್ದ ಸಂತೆಯನ್ನು ಸ್ಥಳಾಂತರ ಮಾಡಲಾಯಿತು. ಇದೀಗ ಸುಗಮ ಸಂಚಾರಕ್ಕಾಗಿ
“ವೆಯ್ಕುಲರ್ ಓವರ್ ಪಾಸ್” ನಿರ್ಮಿಸಲಾಗುತ್ತಿದೆ.
ಕಾಮಗಾರಿ ಮೊದಲ ದಿನವಾದ ಇಂದು ಸುಮಾರು ಮೂರರಿಂದ ನಾಲ್ಕು ಕಿಲೋಮೀಟರ್ ತನಕ ಟ್ರ್ಯಾಫಿಕ್ ಜಾಮ್ ಆಗಿ ವಾಹನ ಸವಾರರು ಸರಕಾರಕ್ಕೆ ಇಡೀ ಶಾಪ ಹಾಕುತ್ತಿದ್ದ ದೃಶ್ಯ ಕಂಡು ಬಂತು.