ಸಾಹಿತ್ಯದ ಸುಮ ಬೀರುವ ಬಾಸುಮ~ ಡಾ. ಭಾಸ್ಕರಾನಂದ ಶ್ಲಾಘನೆನಡುರಾತ್ರಿಯ ಸ್ವಾತಂತ್ರ್ಯ ಕವನ ಸಂಕಲನ ಬಿಡುಗಡೆ

ಹೆಸರಿನಲ್ಲೇ ಸುಮ (ಪರಿಮಳ) ಹೊಂದಿರುವ ವಿಶೇಷ ಸದಭಿರುಚಿಯ ರಂಗನಟ ಬಾಸುಮ ಕೊಡಗು ಅವರು ಸಾಹಿತ್ಯ, ಕಲೆಯ ಸುಮವನ್ನು ಪಸರಿಸುತ್ತಿದ್ದಾರೆ. ನಾನು ಬರೆದ “ಭೀಷ್ಮನ ಕೊನೆಯ ದಿನಗಳು’ ಎಂಬ ಕೃತಿಯನ್ನು ರಂಗದಲ್ಲಿ ಪ್ರದರ್ಶಿಸಿದ್ದಾರೆ. ಸ್ಪರ್ಧೆಯಲ್ಲಂತೂ ಈ ನಾಟಕ ಯಾವಾಗಲೂ ಪ್ರಥಮ ಬರುತ್ತಿತ್ತು. ಅದಕ್ಕೆ ಕಾರಣ ನನ್ನ ಕೃತಿಯಲ್ಲ, ಬಾಸುಮ ಅವರ ಸಾಹಸ ಎಂದು ತುಳು ಕೂಟದ ಸ್ಥಾಪಕ, ಖ್ಯಾತ ವೈದ್ಯ ಡಾ. ಭಾಸ್ಕರಾನಂದ ಶ್ಲಾಘಿಸಿದರು.
ಉಡುಪಿಯ ಮಥುರಾ ಕಂಫರ್ಟ್ನ ಸಭಾಂಗಣದಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕ, ಅಮ್ಮ ಪ್ರಕಾಶನ ಕಟಪಾಡಿ, ವನಸುಮ ಟ್ರಸ್ಟ್ ಕಟಪಾಡಿ ಹಾಗೂ ವನಸುಮ ವೇದಿಕೆ ಕಟಪಾಡಿ ಆಶ್ರಯದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ರಂಗನಟ ಹಾಗೂ ಚಲನಚಿತ್ರ ನಟ ಬಾಸುಮ ಕೊಡಗು ವಿರಚಿತ “ನಡುರಾತ್ರಿಯ ಸ್ವಾತಂತ್ರ್ಯ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ ಎಚ್.ಪಿ. ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕಿ ಡಾ. ನಿಕೇತನ ಕೃತಿ ಪರಿಚಯ ಮಾಡುತ್ತಾ ಆಕರ್ಷಕ ಶೀರ್ಷಿಕೆಯ ಈ ಕೃತಿಯಲ್ಲಿ 73 ಕವನಗಳಿವೆ. ರಾತ್ರಿಯ ಭಯ, ಬೆಳಕಿನ ಧೈರ್ಯವಿದೆ. ಬೇಡಿ ಮತ್ತು ಬಿಡುಗಡೆಯ ಸಾರವಿದೆ. ಪ್ರೀತಿ, ಪ್ರೇಮ, ಕಾಮ ಸಂಗತಿಗಳೂ ಇವೆ. ಪ್ರಮುಖವಾಗಿ ಸ್ವಾತಂತ್ರ್ಯದ ಕುರಿತಾಗಿ ಹೆಣ್ಣಿನ ತುಡಿತವಿದೆ. ವರ್ತಮಾನದ ಎಲ್ಲ ವಿಷಯವನ್ನು ಒಳಗೊಂಡಿರುವ ವಿಶಿಷ್ಟ ಸಂಕಲನವಿದು ಎಂದರು
ಉಡುಪಿ ವಿಶ್ವನಾಥ ಶೆಣೈ, ವನಸುಮ ಟ್ರಸ್ಟ್ನ ಕಾರ್ಯದರ್ಶಿ ವಿನಯ ಆಚಾರ್ಯ ಮುಂಡ್ಕೂರು, ಸಾಹಿತಿ, ಕೃತಿಕಾರ ಬಾಸುಮ ಕೊಡಗು ಉಪಸ್ಥಿತರಿದ್ದರು.
ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪಲ್ಲವಿ ಕೊಡಗು ನಿರೂಪಿಸಿದರು. ಕಾವ್ಯವಾಣಿ ಕೊಡಗು ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಕಟಪಾಡಿಯ ಗಾನಪಲ್ಲವಿ (ರಿ.) ತಂಡದವರು “ನಡುರಾತ್ರಿಯ ಸ್ವಾತಂತ್ರ್ಯ’ ಕೃತಿಯ ಕವನಗಳನ್ನು ಸುಶ್ರಾವ್ಯವಾಗಿ ಹಾಡಿದರು.