ನಿವೃತ್ತ ಬ್ಯಾಂಕ್‌ ನೌಕರರ ಪಿಂಚಣಿ ಪರಿಷ್ಕರಣೆಗಾಗಿ ಸಂಘಟಿತ ಹೋರಾಟಕ್ಕೆ ರಾಜ್ಯ ಬ್ಯಾಂಕ್ ನಿವೃತ್ತರ ಒಕ್ಕೂಟ ನಿರ್ಣಯ: ಕೇಂದ್ರದ ಮೇಲೆ ಒತ್ತಡ ಹೇರಲು ತೀರ್ಮಾನ

Spread the love

ಬೆಂಗಳೂರು, ಮೇ, ೨೮; ಪಿಂಚಣಿ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ, ಭಾರತೀಯ ಬ್ಯಾಂಕುಗಳ ಸಂಘ, ಕೇಂದ್ರ ಹಣ ಕಾಸು ಸಚಿವರು ಒಪ್ಪಿಗೆ ನೀಡಿದ್ದರೂ ಸಹಾ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಹೀಗಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೋರಾಟ ತೀವ್ರಗೊಳಿಸಲು ಕರ್ನಾಟಕ ರಾಜ್ಯ ಬ್ಯಾಂಕ್ ನಿವೃತ್ತರ ಒಕ್ಕೂಟ ನಿರ್ಣಯ ಕೈಗೊಂಡಿದೆ.

ಜಯನಗರ ಸೌತ್ ಎಂಡ್ ಸರ್ಕಲ್ ನ ವಿಜಯಾ ಕಾಲೇಜಿನ ಸಭಾಂಗಣದಲ್ಲಿ ನಡೆದ ಒಕ್ಕೂಟದ ನಾಲ್ಕನೇ ತ್ರೈಮಾಸಿಕ ಸಮ್ಮೇಳನದಲ್ಲಿ ಸಂಘಟಿತ ಹೋರಾಟಕ್ಕೆ ಕರೆ ನೀಡಿದೆ. ಕರ್ನಾಟಕ ರಾಜ್ಯ ನಿವೃತ್ತ ಬ್ಯಾಂಕ್‌ ನೌಕರರ ಒಕ್ಕೂಟದ ಅಧ್ಯಕ್ಷ ಕಾಂ. ಬಿ. ದೇವದಾಸ ರಾವ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್. ಸಿ. ಜೈನ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ನಿವೃತ್ತರಿಗೆ ಪಿಂಚಣಿ ಪರಿಷ್ಕರಿಸಿಲ್ಲ. ಎರಡು ದಶಕಗಳಿಂದ ಹೋರಾಟ ಮಾಡುತ್ತಿದ್ದರೂ ಕೊಟ್ಟ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸುತ್ತಿಲ್ಲ ಎಂದರು.

ಕರ್ನಾಟಕ ರಾಜ್ಯ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ ಸಂಚಾಲಕ ಕೆ. ಎನ್. ಗಿರಿರಾಜ್‌ ಮಾತನಾಡಿ, ನಿವೃತ್ತರ ಬೇಡಿಕೆಗಳು ನ್ಯಾಯಯುತವಾಗಿದ್ದು, ಬ್ಯಾಂಕ್ ಸಂಘಟಗಳ ಸಂಯುಕ್ತ ವೇದಿಕೆ ಪಿಂಚಣಿ ಪರಿಷ್ಕರಣೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಹೋರಾಟ ತೀವ್ರಗೊಳಿಸಲಿದೆ ಎಂದರು.

ಅಖಿಲ ಭಾರತ ಬ್ಯಾಂಕ್ ಪೆನ್ಷನೆರ್ಸ್ ಅಂಡ್ ರಿಟೈರೀಸ್ ಕಾನ್ಫಡೆರೇಷನ್ ಕಾರ್ಯಾಧ್ಯಕ್ಷ ಎ. ಎನ್. ಕೃಷ್ಣ ಮೂರ್ತಿ ಮಾತನಾಡಿ, ಬ್ಯಾಂಕ್ ನಿವೃತ್ತರೆಲ್ಲರೂ ಒಟ್ಟಾಗಿ ಹೋರಾಟ ಮಾಡಿದರೆ ಬೇಡಿಕೆ ಈಡೇರಲಿದೆ ಎಂದರು.

ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘದ ಅಧ್ಯಕ್ಷ ಎ. ಎನ್. ಸುರೇಶ್ ಮಾತನಾಡಿ, ಪಿಂಚಣಿ ಪರಿಷ್ಕರಣೆ ವಿಷಯವನ್ನು ಅಧ್ಯತೆಯ ಮೇಲೆ ಭಾರತೀಯ ಬ್ಯಾಂಕುಗಳ ಸಂಘದೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸಲು ಹೋರಾಟ ಮಾಡುವುದಾಗಿ ತಿಳಿಸಿದರು.

ಕರ್ನಾಟಕ ಬ್ಯಾಂಕ್‌ ನೌಕರರ ಸಂಘದ ಪ್ರಮುಖರಾದ ಕೆ. ಚಂದ್ರ ಶೇಖರ್ ಮಾತನಾಡಿ, ಕೇಂದ್ರ ಸರ್ಕಾರವು ತಾರತಮ್ಯ ನೀತಿಯನ್ನು ಕೈಬಿಟ್ಟು ರಿಸರ್ವ್ ಬ್ಯಾಂಕ್ ಮಾದರಿಯಲ್ಲಿ ಬ್ಯಾಂಕ್ ನಿವೃತ್ತರ ಪಿಂಚಣಿಯನ್ನು ಕೂಡಲೇ ಪರಿಷ್ಕರಿಸಬೇಕು. ಹೋರಾಟವನ್ನು ನಿರ್ಣಾಯಕ ಹಂತಕ್ಕೆ ಕೊಂಡಯ್ಯಲಾಗುವುದು ಎಂದರು.

ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟದ ಪದಾಧಿಕಾರಿಗಳಾದ ಎನ್. ಟಿ. ಹೆಗ್ಡೆ, ಯು. ಅಬ್ದುಲ್ ಜಲೀಲ್, ರತ್ನಾ ಉತ್ತಪ್ಪ, ಸುಧಾಕರ ಶೆಟ್ಟಿ, ವಿಶ್ವನಾಥ ನಾಯ್ಕ್, ವೆಂಕಟರಾವ್ ಮತ್ತು ಕರ್ನಾಟಕ ರಾಜ್ಯ ಬ್ಯಾಂಕ್ ನಿವೃತ್ತರ ಒಕ್ಕೂಟದ ಉಪ ಪ್ರಧಾನ ಕಾರ್ಯದರ್ಶಿ ಎಂ. ಎಸ್. ಭಟ್ ಮತ್ತು ಇತರೆ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ಚಿತ್ರಶೀರ್ಷಿಕೆ; ಕರ್ನಾಟಕ ರಾಜ್ಯ ನಿವೃತ್ತ ಬ್ಯಾಂಕ್ ನೌಕರರ ಒಕ್ಕೂಟದ ನಾಲ್ಕನೇ ತ್ರೈಮಾಸಿಕ ಸಮ್ಮೇಳನ ಜಯನಗರದ ವಿಜಯ ಕಾಲೇಜು ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಕಾಂ. ಬಿ. ದೇವದಾಸ ರಾವ್ ಅಧ್ಯಕ್ಷತೆಯಲ್ಲಿ ನಡೆಯಿತು. ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್. ಸಿ. ಜೈನ್, ಕರ್ನಾಟಕ ರಾಜ್ಯ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ ಸಂಚಾಲಕ ಕೆ. ಎನ್. ಗಿರಿರಾಜ್‌, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘದ ಅಧ್ಯಕ್ಷ ಎ. ಎನ್. ಸುರೇಶ್ ಮತ್ತಿತರರು ಪಾಲ್ಗೊಂಡರು.

Right Click Disabled