ತುರುವೇಕೆರೆ: ಮಾಯಸಂದ್ರದಲ್ಲಿ ಜೈನ ಸಮಾಜದ ವತಿಯಿಂದ ದಿ.ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಶ್ರದ್ಧಾಂಜಲಿ ಕಾರ್ಯಕ್ರಮ.

Spread the love

ವರದಿ- ಸಚಿನ್ ಮಾಯಸಂದ್ರ.

ತುರುವೇಕೆರೆ: ದಿವಂಗತ ಶ್ರೀ ಚಾರುಕೀರ್ತಿ ಭಟ್ಟಾರಕ ಶ್ರೀಗಳ ಅಗಲಿಕೆಯಿಂದ ಅಪಾರ ನಷ್ಟ ಉಂಟಾಗಿದೆ ಎಂದು ಜೈನ ಸಮಾಜದ ಮುಖಂಡರಾದ ಚಂದ್ರಪ್ರಭು ಹೇಳಿದರು.

ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ 1008
ಶಖೆ ದಿಗಂಬರ ಜೈನ ಪಾಶ್ವನಾಥ ಸ್ವಾಮಿ ಟ್ರಸ್ಟ್ (ರಿ) ಗೌರವಾಧ್ಯಕ್ಷರಾಗಿದ್ದ ಮತ್ತು ಜೈನ ಸಮಾಜದ ಶ್ರೀಗಳಾದ ಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನಿಧನದ ಹಿನ್ನೆಲೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಜೈನ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಯಿತು.

ಈ ವೇಳೆ ಸಮಾಜದ ಅಧ್ಯಕ್ಷರಾದ ಚಂದ್ರಪ್ರಭು ಮಾತನಾಡಿ ಶ್ರೀಗಳು 12-12-1969ರಲ್ಲಿ ಕ್ಷುಲ್ಲಕ ದೀಕ್ಷೆ ಸ್ವೀಕರಿಸಿದರು,
ವಿಚಾರ ಸಂಕಿರಣ, ಧರ್ಮ ಸಭೆಗಳಲ್ಲಿ ಭಾಗವಹಿಸಿ ತಮ್ಮ ಸರಳಶೈಲಿ ಪ್ರವಚನಗಳಿಂದ ಶ್ರಾವಕರ ಮನ ಗೆದ್ದಿದ್ದಾರೆ. ಶ್ರೀಗಳು ಜೈನ ಧರ್ಮ ಇಂದಿಗೂ ತನ್ನತನ ಉಳಿಸಿಕೊಂಡು ಬರುವುದಕ್ಕೆ ಪ್ರಮುಖ ಕಾರಣವೆಂದರೆ ಜೈನ ತತ್ವಶಾಸ್ತ್ರ ಗ್ರಂಥಗಳು ಹಾಗೂ ಜೈನ ವಾಸ್ತುಶಿಲ್ಪ ಕಲೆ ಎಂಬುದನ್ನು ಅರಿತು ಬಸದಿಗಳ ಜೀರ್ಣೋದ್ದಾರ, ಜೈನ ಸಾಹಿತ್ಯ ಪ್ರಕಟಣೆಗೆ ವಿಶೇಷವಾಗಿ ಒತ್ತು ನೀಡಿರುವುದರ ಜೊತೆಗೆ ಅವುಗಳ ಸಂರಕ್ಷಣೆಗಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಮಹಿಳಾ ಸಮಾಜದ ಅಧ್ಯಕ್ಷರಾದ ಸುಮತಿ ಪ್ರಕಾಶ್ ಮಾತನಾಡಿ, ನಾಲ್ಕು ಮಹಾಮಸ್ತಕಾಭಿಷೇಕಗಳು ಶ್ರೀಗಳ ನೇತೃತ್ವದಲ್ಲಿ ನೆರವೇರಿವೆ.ಶ್ರೀ ಬಾಹುಬಲಿ ಮಕ್ಕಳ ಆಸ್ಪತ್ರೆ, ವೃದ್ದಾಶ್ರಮಗಳಂಥ ಸಮಾಜಮುಖಿ ಹಾಗೂ ಇನ್ನೂ ಹತ್ತು ಹಲವು ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ನಿರ್ವಹಿಸುತ್ತಾ ಈ ನಾಡಿನಲ್ಲಿ ಶಾಂತಿ ನೆಲೆಸಲು ಸತತ 50 ವರ್ಷಗಳ ಸೇವೆಯನ್ನು ಸಮಾಜಕ್ಕೆ ಸಲ್ಲಿಸುತ್ತಾ ಬಂದಿದ್ದಾರೆ. ಇದನ್ನು ಅರಿತ ಕನಾ೯ಟಕ ಸರ್ಕಾರವು 2018ರ ರಾಷ್ಟ್ರೀಯ ಶ್ರೀ ಭ.ಮಹಾವೀರ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಹೆಮ್ಮೆಯ ವಿಷಯವಾಗಿದೆ.

ಅವರನ್ನು ಎಲ್ಲ ಜಾತಿ, ಮತ, ಪಂಥಗಳ ಭಕ್ತರೂ ಅತಿಯಾಗಿ ಗೌರವಿಸುವ, ಆದರಿಸುವ, ಪ್ರೀತಿಸುವ, ಅದೆಲ್ಲವೂಗಳಿಗಿಂತ ಅವರನ್ನು ಕಂಡರೆ ಹೆಚ್ಚು ಭಕ್ತಿ, ಅತಿ ಕಡಿಮೆ ಭಯ, ಇನ್ನೂ ಜಾಸ್ತಿ ಪ್ರೀತಿ, ಹೆಚ್ಚಿನ ಅಭಿಮಾನ ಇಟ್ಟುಕೊಳ್ಳುವುದಕ್ಕೆ ಕಾರಣವಾಗಿದೆ ಹಾಗೂ ತಾವಾಯಿತು ತಮ್ಮ ಕೆಲಸವಾಯಿತು. ಪೂಜೆ, ಧಾರ್ಮಿಕ ಕಾರ್ಯಗಳು ಜೊತೆಗೆ ಮಾತುಕತೆ, ಅಧ್ಯಯನ, ಧಾರ್ಮಿಕ ಆಚರಣೆಗಳಲ್ಲಿ ಸ್ವಾಮೀಜಿ ಸದಾ ನಿರತರಾಗಿದ್ದರು ಅವರ ನಿಧನಕ್ಕೆ ಸರ್ವರೂ ಕಂಬನಿ ಮಿಡಿದಿದ್ದಾರೆ, ಅವರ ಅಂತ್ಯಸಂಸ್ಕಾರದ ವೇಳೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಹಲವಾರು ಮಠದ ಶ್ರೀಗಳು ಭಾಗವಹಿಸಿ ಸಹಕರಿಸಿದ್ದಾರೆ, ಸರ್ವರಿಗೂ ಸಮಾಜದ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಯಸಂದ್ರ ಜೈನ ಸಮಾಜದ ಹಲವಾರು ಪದಾಧಿಕಾರಿಗಳು, ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಸುಮತಿ ಪ್ರಕಾಶ್ ಹಾಗೂ ಸರಸ್ವತಿ ಮಹಿಳಾ ಸಮಾಜದ ಎಲ್ಲ ಪದಾಧಿಕಾರಿಗಳು, ಪುರೋಹಿತರಾದ ಪ್ರದೀಪ್ ಸೇರಿದಂತೆ ಮುಖಂಡ ವಿಪುಲ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು, ಸಮಸ್ತ ಜೈನ ಸಮಾಜದ ಮುಖಂಡರು ಸಮಾಜದವರು ಪಾಲ್ಗೊಂಡಿದ್ದರು.

Right Click Disabled